ಕಾರು ಮತ್ತು ಲಾರಿ ಅಪಘಾತ, ಸ್ಥಳದಲ್ಲೇ ಮೂವರು ಸಾವು

ಚಿತ್ರದುರ್ಗ ( ಆಗಸ್ಟ್ 27) : ಕಾರು ಮತ್ತು ಲಾರಿ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಅಸುನೀಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48 ರ ಸೀಬಾರ ಬಳಿ ನಿನ್ನೆ  (ಶುಕ್ರವಾರ) ಭೀಕರ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ 9:30 ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಬೆಂಗಳೂರಿನಿಂದ ಶಿರಡಿಗೆ ತೆರಳುತ್ತಿದ್ದ ಫಾರ್ಚೂನರ್ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಬೆಂಗಳೂರು ಮಾರ್ಗಕ್ಕೆ ತಿರುಗಿ, ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಈ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೆ ಮೂವರು ಗಾಯಗೊಂಡಿದ್ದಾರೆ. ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ಮನೀಶ್(40), ಸಿಂಚನ(35) ಮತ್ತು ಭೂಮಿಕಾ ಎಂದು ಗುರುತಿಸಲಾಗಿದ್ದು ಅವರೆಲ್ಲರೂ ಬೆಂಗಳೂರಿನ ರಾಜಾಜಿನಗರದವರು ಎನ್ನಲಾಗಿದೆ. ಗಾಯಾಳುಗಳನ್ನು ಕಂಗುಮಠ, ಗಿರಿಧರ ಮತ್ತು ಆಶಾಕಿರಣ್ ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹಾಗೂ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Send this to a friend