ಕಾಡುಗೊಲ್ಲ ಬುಡಕಟ್ಟಿನ ಜಾನಪದ ಲೋಕದ, ನಾಡೋಜ ಸಿರಿಯಜ್ಜಿಯ ಸಾಂಸ್ಕೃತಿಕ ಪ್ರತಿಷ್ಠಾನ ಲೊಗೋ ಬಿಡುಗಡೆ.
ದಾವಣಗೆರೆ : ಗೊಡ್ಡು ಸಂಪ್ರದಾಯಗಳನ್ನು ಧಿಕ್ಕರಿಸಿ ಮಾದರಿ ಬದುಕಿನತ್ತ ಹೆಜ್ಜೆ ಹಾಕಿ ಇತರೇ ಮಹಿಳೆಯರಿಗೆ ಸಿರಿಯಜ್ಜಿ ದಾರಿದೀಪವಾಗಿದ್ದಾರೆಂದು ಡಾ. ಎಂ.ಮಂಜಣ್ಣ ಹೇಳಿದರು. ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಆನ್ ಲೈನ್ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು ಹತ್ತು ಸಾವಿರ ಪದಗಳ ಒಡತಿ, ಬುಡಕಟ್ಟು ಕಾಡುಗೊಲ್ಲರ ಪರಂಜ್ಯೋತಿ ಜಾನಪದ ದೃವತಾರೆ, ಸಾವಿರ ಸಿರಿಬೆಳಗು ಸಿರಿಯಜ್ಜಿ ನವರು ಇವತ್ತಿನ ಸಂದರ್ಭದಲ್ಲಿ ಹಟ್ಟಿಗಳಲ್ಲಿ ಸಿರಿಯಜ್ಜಿಯಂತಹ ಕಲಾವಿದರು ಸಿಗುವುದು ತುಂಬಾ ವಿರಳ ಆದರೆ ಸಿರಿಯಜ್ಜಿ ತನ್ನ ಬದುಕನ್ನು ನಿರ್ವಹಿಸಿದ ಕ್ರಮದ ಹಿನ್ನೆಲೆಯಲ್ಲಿ ಬಹುಮುಖ್ಯರಾಗಿರುತ್ತಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯ ಸಿರಿಯಜ್ಜಿ ತನ್ನ ವೈಧವ್ಯದ ಸಂದರ್ಭದಲ್ಲಿ ಕಾಡುಗೊಲ್ಲರಿಲ್ಲಿದ್ದ ಗೊಡ್ಡು ಸಂಪ್ರದಾಯಗಳನ್ನು ಧಿಕ್ಕರಿಸಿ ಇತರೇ ಮಹಿಳೆಯರಿಗೆ ಮಾದರಿ ಬದುಕಿನತ್ತ ದಿಟ್ಟ ಹೆಜ್ಜೆ ಹಾಕಿ ಬದುಕಿನ ಚಿತ್ರಣವನ್ನು ತೋರಿಸಿಕೊಟ್ಟ ಮಹಾತಾಯಿ ನೋಡೋಜ ಸಿರಿಯಜ್ಜಿಯವರು. ಇವರಲಿದ್ದ ಆಗಾಧ ಪ್ರತಿಭೆಯನ್ನು ವಿದ್ವಾಂಸ ಕೃಷ್ಣಮೂರ್ತಿ ಹನೂರು ಒಳಹೊಕ್ಕು ಎಳೆ ಎಳೆಯಾಗಿ ಬಿಡಿಸಿ ಹೊರತೆಗೆದು ನಾಡಿಗೆ ಪರಿಚಯಿಸಿದರು. ಇವರ ಕಲೆಯನ್ನು ನೋಡಿ ಮನಸೋತ ಕನ್ನಡ ವಿಶ್ವವಿದ್ಯಾಲಯದಿಂದ ಕಳ್ಳೇಸಾಲಿನ ಅನಕ್ಷರಸ್ಥೆ ಜಾನಪದ ಕಣಜ,ಕೋಗಿಲೆಗೆ “ನಾಡೋಜ ಸಿರಿಯಜ್ಜಿ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಮಾತಾಡಿ ಸಿರಿಯಜ್ಜಿ ಸ್ಮರಣೆಯಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಬಹಳ ವರ್ಷಗಳ ಕನಸಾಗಿತ್ತು ಇಂದು ಈ ಕನಸು ನನಸಾಗಿದೆ ಎಂದರು. ಓರ್ವ ಜಾನಪದ ಕಲಾವಿದೆ ಮಹಿಳೆಯ ಹೆಸರಿನಲ್ಲಿ ಸ್ಥಾಪಿತವಾಗಿರುವ ರಾಜ್ಯದ ಮೊದಲ ಹಾಗೂ ಏಕೈಕ ಪ್ರತಿಷ್ಠಾನವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಮುಂಬರುವ ದಿನಗಳಲ್ಲಿ ಈ ಪ್ರತಿಷ್ಠಾನದಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಜೊತೆಗೆ ಕಾಡುಗೊಲ್ಲ ಬುಡಕಟ್ಟಿನ ಬಗ್ಗೆ ಅಧ್ಯಯನ ಮಾಡಿದ ಓರ್ವ ವಿದ್ವಾಂಸರಿಗೆ ಮತ್ತು ಓರ್ವ ಜಾನಪದ ಕಲಾವಿದರಿಗೆ ಸಿರಿಯಜ್ಜಿ ಸ್ಮರಣೆಯಲ್ಲಿ ರಾಜ್ಯ ಮಟ್ಟದ ಗೌರವ ಪ್ರಶಸ್ತಿ ನೀಡಲಾಗುತ್ತದೆ. ಸಿರಿಯಜ್ಜಿ ಸ್ಮಾರಕ ಭವನ ನಿರ್ಮಾಣದ ಬಗ್ಗೆ ಮಹತ್ತರ ಯೋಜನೆಗಳನ್ನು ರೂಪಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳು ಭಾಗವಹಿಸಿದ್ದರು.