ಹಿರಿಯೂರು : ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ವರ್ಷದ 365 ದಿನಗಳು ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆ ನಿಜಕ್ಕೂ ಅಭಿನಂದನೀಯ ಎಂಬುದಾಗಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮುಖಂಡ ಡಿ.ಟಿ.ಶ್ರೀನಿವಾಸ್ ಹೇಳಿದರು.
ನಗರದ ಎ.ಕೃಷ್ಣಪ್ಪ ರೋಟರಿ ಸಭಾಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ನಗರದಲ್ಲಿ 2000 ವಸತಿ ರಹಿತರಿಗೆ ವಸತಿ ಮಂಜೂರು ಮಾಡುವಂತೆ ಶಾಸಕರ ಮುಖಾಂತರ ಈಗಾಗಲೇ ಮಾನ್ಯ ವಸತಿ ಸಚಿವರಿಗೆ ಮನವಿ ಮಾಡಲಾಗಿದ್ದು, ನಗರದಲ್ಲಿ ಸಂಪೂರ್ಣ ಯುಜಿಡಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದಾಗಿ ಅವರು ತಿಳಿಸಿದರು.
ಇಂದಿನ ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಹ ಯಾವುದೇ ಆತಂಕಕ್ಕೊಳಗಾಗದೆ ಪೌರಕಾರ್ಮಿಕರು ನಗರದ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಕೊಳಚೆಯನ್ನು ನಿರ್ಮೂಲನಗೊಳಿಸಿ ನಗರವನ್ನು ಸ್ವಚ್ಛವಾಗಿರಿಸುತ್ತಿದ್ದಾರೆ ಇವರ ಸೇವೆಯು ನಿಜಕ್ಕೂ ಅರ್ಥಪೂರ್ಣವಾದದ್ದು ಎಂಬುದಾಗಿ ಅವರು ಪೌರಕಾರ್ಮಿಕರನ್ನು ಶ್ಲಾಘಿಸಿದರು.
ಸಮಾಜ ಸೇವಕಿ ಶಶೀಕಲ ರವಿಶಂಕರ್ ಮಾತನಾಡಿ, ಮೋದಿಯವರ ಸ್ವಚ್ಚಭಾರತ್ ಪರಿಕಲ್ಪನೆಗೆ ಪೌರಕಾರ್ಮಿಕರ ಕೊಡಿಗೆ ಅಪಾರ, ಇಂದಿನ ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಪೌರಕಾರ್ಮಿಕರು ಅಂಜದೆ – ಅಳುಕದೆ ಅಘೋಷಿತ ಕೊರೊನಾ ವಾರಿಯರ್ಸ್ ನಂತೆ ಕೆಲಸ ಮಾಡಿದ್ದಾರೆ, ಕೇಂದ್ರ ಸರ್ಕಾರದ ಆದೇಶದಂತೆ 10 ವರ್ಷ ಕೆಲನಿರ್ವಹಿಸಿರುವ ಇಂತಹ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರ ಕೆಲಸ ಖಾಯಂ ಜೊತೆಗೆ ಪಿಂಚಣಿ ಸೌಲಭ್ಯ ನೀಡಬೇಕು ಎಂಬುದಾಗಿ ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ರಾಜೇಶ್ವರಿ, ನಗರಸಭೆ ಸದಸ್ಯರಾದ ಅಪೂರ್ವಚಿರಂಜೀವಿ, ಅಂಬಿಕ ಆರಾಧ್ಯ, ಬಾಲಕೃಷ್ಣ, ಸಣ್ಣಪ್ಪ, ವೈಪಿಡಿ ದಾದಾಪೀರ್, ರತ್ನಮ್ಮ, ಮಾಜಿ ಅಧ್ಯಕ್ಷೆ ಟಿ.ಮಂಜುಳಾ, ಮಾಜಿ ಸದಸ್ಯರಾದ ಡಿ.ಗಂಗಾಧರ್, ನಗರಸಭೆ ಆಯುಕ್ತರಾದ ಲೀಲಾವತಿ, ನಗರಸಭೆ ಅಭಿಯಂತರಾದ ಮಹಾಂತೇಶ್, ಪೌರನೌಕರರ ಸಂಘದ ಅಧ್ಯಕ್ಷರಾದ ದುರುಗೇಶ್, ಆರೋಗ್ಯ ನಿರೀಕ್ಷಕ ಸುನೀಲ್ ಸೇರಿದಂತೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.