ಬ್ಯಾಡರಹಳ್ಳಿಯಲ್ಲಿ ಶುದ್ಧಕುಡಿಯುವ ನೀರಿನಘಟಕ
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರಿಂದ ಉದ್ಘಾಟನೆ
ಹಿರಿಯೂರು : ರಾಜ್ಯಾದ್ಯಂತ ಕೊರೊನಾ ರೋಗದ ಹರಡುವಿಕೆಯಿಂದಾಗಿ ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಸಾರ್ವಜನಿಕರಿಗೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲಾಗುತ್ತಿದೆ ಎಂಬುದಾಗಿ ಕ್ಷೇತ್ರದ ಶಾಸಕರಾದ ಶ್ರೀಮತಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳ ಹಿಂದೆ ಗ್ರಾಮಕ್ಕೆ ಮಂಜೂರಾಗಿದ್ದ ಈ ಕುಡಿಯುವ ನೀರಿನ ಘಟಕದ ಕಾಮಗಾರಿ ಹಲವು ಕಾರಣಗಳಿಂದ ನೆನಗುದಿಗೆ ಬಿದ್ದಿದ್ದು ಈ ಬಗ್ಗೆ ಗ್ರಾಮಸ್ಥರಿಂದ ಹಲವು ದೂರುಗಳು ಕೇಳಿಬಂದಿದ್ದು ಗ್ರಾಮದ ಯುವ ಮುಖಂಡರು ಈ ಬಗ್ಗೆ ಹೋರಾಟ ಸಹ ಮಾಡಿದ್ದರು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಇಂದು ಈ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಗ್ರಾಮಕ್ಕೆ ಸರ್ಮಪಿಸಲಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳಾದ ಶಿವಲಿಂಗಪ್ಪ, ಲಕ್ಷ್ಮಣಪ್ಪ, ಬಿ.ವಿ.ಚಂದ್ರೇಗೌಡ, ಮತ್ತು ಯುವಮುಖಂಡರಾದ ಅರ್ಜುನ್ ಕುಮಾರ್, ಸುರೇಶ್ ಕುಮಾರ್, ಸೇರಿದಂತೆ ಗ್ರಾಮದ ವೀರಭದ್ರಪ್ಪ, ತಿಪ್ಪೇಸ್ವಾಮಿ, ಶ್ರೀನಿವಾಸ ಹಾಗೂ ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು.