ಹಿರಿಯೂರು : ನಗರದ ಕೋಳಿ, ಮೀನು ಮತ್ತು ಕುರಿ ಮಾಂಸ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದಿರುವ ಗ್ರಾಹಕರಿಗೆ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳದಿರುವ ಅಂಗಡಿ ಮಾಲೀಕರುಗಳಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂಬುದಾಗಿ ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಖಡಕ್ ಎಚ್ಚರಿಕೆ ನೀಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವಿವಿಧ ಬಡಾವಣೆಗಳಲ್ಲಿ ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿಯವರು ನಗರದ ಅರಕ್ಷಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಮಿಂಚಿನ ಸಂಚಾರ ನೆಡೆಸಿ, ಮಟನ್ ಮಾರ್ಕೆಟ್, ಬನ್ನಿಮಂಟಪ ಮತ್ತು ಸರಪಳಿ ಸ್ಥಳಗಳನ್ನು ಪರಿಶೀಲಿನೆ ನಡೆಸಿ ನಂತರ ಅವರು ಸುದ್ದಿಗಾರರೊಂದಿಗೆ ವಿಚಾರ ತಿಳಿಸಿದರು.
ನಗರದಲ್ಲಿ ಮಾಸ್ಕ್ ಧರಿಸದೇ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಬೀದಿಬದಿಯ ವ್ಯಾಪಾರಸ್ಥರು, ಮಾಂಸದ ಅಂಗಡಿ ವ್ಯಾಪಾರಿಗಳು, ಪ್ರಧಾನ ರಸ್ತೆಯ ವಿವಿಧ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸುವ ಮೂಲಕ ಕೋವಿಡ್-19 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು ಎಂಬುದಾಗಿ ಸುದ್ದಿಗಾರರಿಗೆ ತಿಳಿಸಿದರು.
ನಗರದ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಪದೇಪದೇ ಸರ್ಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ಪೌರಾಯುಕ್ತರಾದ ಟಿ.ಲೀಲಾವತಿ ಸಾರ್ವಜನಿಕರಿಗೆ ತಾಕೀತು ಮಾಡಿದರು.
ನಗರಸಭೆಯ ವತಿಯಿಂದ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಇಂತಹ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದ್ದು, ನಾಗರೀಕರು ಇದಕ್ಕೆ ಸ್ಪಂದಿಸಬೇಕು ಎಂಬುದಾಗಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.