ಚಿತ್ರದುರ್ಗ : ಕೆಲಸಕ್ಕಾಗಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಚಳ್ಳಕೆರೆ ರಸ್ತೆಯ ನೂರಮೂರು ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಧವಪೆಲ್ಲಾ, ಅಳಗ ನೀಲಿ, ದೀಪಿಕಾ ಮೃತರು ಎಂದು ಗುರುತಿಸಲಾಗಿದೆ. ತಂಗವೇಲು, ವಿಜಯಲಕ್ಷ್ಮಿ, ರಾಹುಲ್, ಮುರುಗಾನ್, ಕಾರ್ತಿಕ್, ಆರ್ಮುಗಂ, ದಾಸ, ಕಾಳೆಂದ್ರಮ್ಮ, ನಿಧಿಯಾ ಗಾಯಗೊಂಡವರಾಗಿದ್ದು, ಇವರೆಲ್ಲರೂ ಹಿರಿಯೂರಿನ ವೇದಾವತಿ ನಗರದ ತಮಿಳು ಕಾಲೋನಿಯವರು ಎಂದು ಎನ್ನಲಾಗಿದೆ. ಹಿರಿಯೂರಿನಿಂದ ಟಾಟಾ ಏಸ್ ನಲ್ಲಿ ಹತ್ತಕ್ಕೂ ಹೆಚ್ಚು ಜನರನ್ನು ತುಂಬಿಕೊಂಡು ಚಳ್ಳಕೆರೆ ಗೆ ಕಾಂಕ್ರೀಟ್ ಕೆಲಸಕ್ಕಾಗಿ ಚಳ್ಳಕೆರೆ ನಗರಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಓರ್ವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡ 9 ಜನರನ್ನು ಚಿಕಿತ್ಸೆಗಾಗಿ ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯೂರು ಪೋಲಿಸ್ ವೃತ್ತ ನಿರೀಕ್ಷಕ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.