ಹಿರಿಯೂರು ( ಸೆ.7) : ಚಲಿಸುತ್ತಿದ್ದ ಲಾರಿಗಳು ನಡು ರಸ್ತೆಯಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಹಿರಿಯೂರು ನಿಂದ ಶಿವಮೊಗ್ಗ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಿರಿಯೂರು ತಾಲ್ಲೂಕಿನ ಭರಮಗಿರಿ ಬೈಪಾಸ್ ಬಳಿ ಈ ಘಟನೆ ತಡರಾತ್ರಿ ಈ ಅವಗಡ ನಡೆದಿದ್ದು ಸಿಲುಕಿಕೊಂಡ ಲಾರಿಗಳನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ರಸ್ತೆ ಸಂಪರ್ಕ ಕಡಿತದಿಂದ ಹಿರಿಯೂರಿನಿಂದ ಹೊಸದುರ್ಗ ಶಿವಮೊಗ್ಗ, ಚಿಕ್ಕಮಗಳೂರು ತಲುಪಲು ಚಿತ್ರದುರ್ಗ ಮೂಲಕ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆ ಬಂದು ಸಂಪೂರ್ಣ ರಸ್ತೆ ನೆನೆದಿದ್ದರಿಂದ ಲಾರಿ ಸರಕು ತುಂಬಿಕೊಂಡು ಹೋಗುವಾಗ ನಡು ರಸ್ತೆಯಲ್ಲಿ ಲಾರಿ ಚಕ್ರಗಳು ಅರ್ಧಕ್ಕೆ ಸಿಲುಕಿದ್ದು, ಹಿಂದಕ್ಕೆ ಮುಂದಕ್ಕೆ ಬರಲಾಗದೆ ಎದುರಿಗೆ ಬಂದ ಲಾರಿಗಳು ಸಹ ಸಿಲುಕಿಕೊಂಡಿದ್ದು, ಸಂಪೂರ್ಣ ರಸ್ತೆ ಖಡಿತವಾಗಿವೆ.
ಇತ್ತ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿದ್ದು, ಸುಮಾರು 10 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ಹೆಚ್ಚುವರಿ ನೀರು ಹೊರ ಹೋಗುತ್ತಿದ್ದು ರಸ್ತೆ ಬಂದ್ ಮಾಡಲಾಗಿದೆ. ಎರಡು ಕಡೆಯಿಂದಲೂ ರಸ್ತೆ ಸಂಪರ್ಕ ಕಡಿತದಿಂದ ಹಿರಿಯೂರನಿಂದ ಹೊಸದುರ್ಗ ಕಡೆ ಹೋಗುವ ಪ್ರಯಾಣಿಕರು ಹಾಗೂ ಶಿವಮೊಗ್ಗ ಹೊಸದುರ್ಗದಿಂದ ಹಿರಿಯೂರು, ಬೆಂಗಳೂರು ಕಡೆ ತೆರಳುವ ಪ್ರಯಾಣಿಕರು ಚಿತ್ರದುರ್ಗ ಮೂಲಕ ಬರಬೇಕಾದ ಸ್ಥಿತಿ ಎದುರಾಗಿದೆ.
ಭರಮಗಿರಿ ಕೆರೆ ಏರಿ ಬಿರುಕು : ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಕಡೆ ಹೋಗುವ ಕಾರು, ಬಸ್, ಬೈಕ್ ಇತರೆ ವಾಹನಗಳು ಭರಮಗಿ ಕೆರೆ ಏರಿ ಮೂಲಕವೇ ಚಲಿಸಬೇಕು. ಕೆರೆ ಏರಿ ಬಿರುಕು ಬಿಟ್ಟಿ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಬಿಟ್ಟ ಏರಿಯನ್ನು ದುರಸ್ಥಿ ಮಾಡಲು ಮುಂದಾಗಿದ್ದಾರೆ.
11112 ಕ್ಯೂಸೆಕ್ ಒಳಹರಿವು : ತಾಲ್ಲೂಕಿನ ವಾಣಿ ವಿಲಾಸ ಜಲಾಶಯ 1934ರ ಬಳಿಕ ವಾಣಿವಿಲಾಸ ಸಾಗರ ಭರ್ತಿಯಾಗಿ ಕೋಡಿ ಬಿದ್ದಿದ್ದು, ಇಂದಿನ ವರದಿಯಲ್ಲಿ ಜಲಾಶಯಕ್ಕೆ 11112 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 134 ಅಡಿ ತಲುಪಿದೆ. ಇನ್ನು ಜಲಾಶಯದಿಂದ
10957 ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದೆ. ಇತ್ತ ವೇದಾವತಿ ನದಿ ನದಿ ಕೂಡ ಮೈದುಂಬಿ ಹರಿಯುತ್ತಿದೆ.